“ಯಕ್ಷ ಕಣಜ” ಕೃತಿ ಬಿಡುಗಡೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಏಪ್ರಿಲ್ 9 , 2016
|
ಎಪ್ರಿಲ್ 9 , 2016
|
“ಯಕ್ಷ ಕಣಜ” ಕೃತಿ ಬಿಡುಗಡೆ
ಶಂಕರ ನಾರಾಯಣ :
ಹಿರಿಯ ಯಕ್ಷಗಾನ ಕಲಾವಿದ ಮೊಳಹಳ್ಳಿ ಹೆರಿಯ ನಾಯ್ಕರ ಜೀವನ- ಸಾಧನೆಗಳನ್ನು ಅವರೊಡನೆ ಸಂದರ್ಶನ ನಡೆಸಿ ಉಪನ್ಯಾಸಕ, ಕುಮಾರ ಶಂಕರನಾರಾಯಣ ಇವರು ರಚಿಸಿದ “ಯಕ್ಷಕಣಜ” ಕೃತಿಯನ್ನು, ಕೋಟ ಗೀತಾನಂದ ಪೌಂಡೇಶನ್ನ ಪ್ರವರ್ತಕ, ಉದ್ಯಮಿ ಶ್ರೀ ಆನಂದ ಕುಂದರ್ರವರು ಇಲ್ಲಿನ ಶ್ರೀ ಶಂಕರನಾರಾಯಣ ಸಭಾಗೃಹದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು “ಈ ಕೃತಿ ಮೊಳಹಳ್ಳಿಯವರ ಜೀವನ-ಸಾಧನೆಗಳೊಂದಿಗೆ, ಪಾರಂಪರಿಕ ಯಕ್ಷಗಾನ ಕಣ್ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಅದರ ಕುರಿತು ಆಸಕ್ತಿವಹಿಸಿ ಸಾಕಷ್ಟು ವಿಷಯಗಳನ್ನು ಮೊಳಹಳ್ಳಿಯವರಂತಹ ಹಿರಿಯ ಕಲಾವಿದರಿಂದ ಸಂಗ್ರಹಿಸಿ ದಾಖಲಿಸಿರುವುದು ಶ್ಲಾಘನಾರ್ಹ” ಎಂದರು. ಕೃತಿಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಪ್ರಾಧ್ಯಾಪಕ ಶ್ರೀ ಎಸ್. ವಿ ಉದಯಕುಮಾರ ಶೆಟ್ಟಿಯವರು, ‘ತೆಂಕು, ಬಡಾ-ಬಡಗು ಯಕ್ಷಗಾನ ಕ್ಷೇತ್ರಕ್ಕೆ ಹೋಲಿಸಿದರೆ ನಮ್ಮ ನಡುತಿಟ್ಟಿನಲ್ಲಿ ಇಂತಹ ಪುಸ್ತಕ ಪ್ರಕಟಣೆ ತೀರಾ ವಿರಳ, ಯಕ್ಷಗಾನದಲ್ಲಿ ಡಾಕ್ಟ್ರರೇಟ್ ಮಾಡುವಷ್ಟು ವಿಷಯ ಮೊಳಹಳ್ಳಿಯವರಲ್ಲಿದ್ದು ಈ ಕೃತಿಯು ಯಕ್ಷಗಾನಾಭಿಮಾನಿಗಳಿಗೊಂದು ಸಂಗ್ರಹ ಯೋಗ್ಯ ಕೃತಿ’ ಎಂದರು.
ಕೃತಿ ರಚನಕಾರರಾದ ಶ್ರೀ ಕುಮಾರ ಶಂಕರನಾರಾಯಣ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಕೃತಿಯ ಪರಿಚಯಗೈದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಶಂಕರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಲಕ್ಮೀನಾರಾಯಣ ಉಡುಪರು, ಕೃತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಇಂದಿನ ಪ್ರಜ್ಞಾವಂತ ಪ್ರೇಕ್ಷಕರು ಇಂತಹ ಕೃತಿಗಳನ್ನು ಹೆಚ್ಚು ಹೆಚ್ಚು ಕೊಂಡು ಓದುವಂತಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಅರ್ಥಧಾರಿಗಳಾದ ಶ್ರೀಶಿವರಾಮ ಶೆಟ್ಟಿ ಸಂಕಾಪುರ, ಪುಸ್ತಕ ಪ್ರಕಾಶಕರಾದ, ಶ್ರೀ ಪ್ರವೀಣಕುಮಾರ ಶೆಟ್ಟಿ ಬೇಳೂರು ಮತ್ತು ಕಾರ್ಯಕ್ರಮದ ಸಹ ಪ್ರಾಯೋಜಕ ಸಂಸ್ಥೆ ಜೆ. ಸಿ. ಐ. ಶಂಕರನಾರಾಯಣದ ಅಧ್ಯಕ್ಷ ಶ್ರೀ ಮಂಜುನಾಥ ಭಟ್ ಉಪಸ್ಥಿತರಿದ್ದರು.
ಜೆ. ಸಿ. ಐ. ಶ್ರೀ ಪ್ರವೀಣಚಂದ್ರ ಶೆಟ್ಟಿಗಾರ್ ಅತಿಥಿ ಗಳನ್ನು ಸ್ವಾಗತಿಸಿದರು. ಶ್ರೀರಾಮಚಂದ್ರ ದೇವಾಡಿಗ ಧನ್ಯವಾದಗೈದರು. ಕುಮಾರಿ ಪ್ರಶಸ್ತಿಯ ಪ್ರಾರ್ಥನೆಯೋಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶ್ರೀ ಕೆ. ಪರಮೇಶ್ವರ ಉಡುಪ ಮತ್ತು ಶ್ರೀಕಿಶೋರ್ ಕುಮಾರ್ ನಿರ್ವಹಣೆಗೈದರು. ಸಭಾ ಕಾರ್ಯಕ್ರಮದ ಬಳಿಕ , ಖ್ಯಾತ ಭಾಗವತರುಗಳಾದ ಶ್ರೀ ಕೆ. ಪಿ. ಹೆಗ್ಡೆ, ಶ್ರೀ ವಿಶ್ವೇಶ್ವರ ಸೋಮಯಾಜಿ, ಶ್ರೀಎಸ್. ವಿ. ಉದಯ ಕುಮಾರ್ ಶೆಟ್ಟಿ, ಶ್ರೀ ಉಮೇಶ ಸುವರ್ಣ ಮತ್ತು ಶ್ರೀ ನಾಗೇಶ ಕುಲಾಲ ಇವರಿಂದ ಪೌರಣಿಕ ಯಕ್ಷ ‘ಗಾನ ವೈಭವ ‘ಕಾರ್ಯಕ್ರಮ ನಡೆಯಿತು. ಶ್ರೀ ಚಂದ್ರಯ್ಯ ಆಚಾರ್ ಹಾಲಾಡಿ ಮತ್ತು ಶ್ರೀ ಭಾಸ್ಕರ ಆಚಾರ್ ಕನ್ಯಾಣ ಇವರು ಮದ್ದಳೆ ಮತ್ತು ಚಂಡೆಗಳಲ್ಲಿ ಸಹಕರಿಸಿದರು.
|
|
|